ಅಗಲಿದ ಯಕ್ಷರಂಗದ ಭೀಷ್ಮ ಹಿರಿಯ ಭಾಗವತ ಆರ್ಗೋಡು ಗೋವಿಂದರಾಯ ಶೆಣೈ
ಲೇಖಕರು : ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಭಾನುವಾರ, ಒಕ್ಟೋಬರ್ 11 , 2015
|
ಒಕ್ಟೋಬರ್ 11, 2015
|
ಅಗಲಿದ ಯಕ್ಷರಂಗದ ಭೀಷ್ಮ ಹಿರಿಯ ಭಾಗವತ ಆರ್ಗೋಡು ಗೋವಿಂದರಾಯ ಶೆಣೈ
ಸಿದ್ದಾಪುರ :
ಬಡಗುತಿಟ್ಟು ಯಕ್ಷಗಾನದ ಹಿರಿಯ ಭಾಗವತ, ಖ್ಯಾತ ಕಲಾವಿದ ಆರ್ಗೋಡು ಮೋಹನದಾಸ ಶಣೈಯವರ ತೀರ್ಥರೂಪ ಆರ್ಗೋಡು ಗೋವಿಂದರಾಯ ಶೆಣೈಯವರು ಇನ್ನಿಲ್ಲ . ಅವರಿಗೆ 91 ವರ್ಷ ವಯಸ್ಸಾಗಿತ್ತು.
ಬಡಗುತಿಟ್ಟು ಯಕ್ಷಗಾನ ರಂಗಕ್ಕೆ ಆರ್ಗೋಡು ಗೌಡ ಸಾರಸ್ವತ ಬ್ರಾಹ್ಮಣ ಕುಟುಂಬದವರ ಕೊಡುಗೆ ಅಪಾರ ಹಿಮ್ಮೇಳ-ಮುಮ್ಮೇಳದ ಅನೇಕ ಕಲಾವಿದರಿಂದ ಕೂಡಿದ ಈ ಕುಟುಂಬದ ಹಿರಿಯ ಬಾಗವತ ಸುಮಾರು 91 ವರ್ಷ ಪ್ರಾಯದ ಯಕ್ಷಗಾನ ರಂಗದ ಸವ್ಯಸಾಚಿ ಆರ್ಗೋಡು ಗೋವಿಂದರಾಯ ಶೆಣೈಯವರು ಸುಮಾರು 65 ಸಂವತ್ಸರ ಕಾಲ ಯಕ್ಷಗಾನದ ವಿವಿದ ಆಯಾಮಗಳಲ್ಲಿ ದುಡಿದವರು, ಮೇಳಗಳ ಸಂಘಟಕರಾಗಿ ಎತ್ತಿನಗಾಡಿಯಲ್ಲಿ ಮೇಳದ ಸಾಮನುಗಳನ್ನು ಊರಿಂದೂರಿಗೆ ಸಾಗಿಸಿ ಮೇಳ ನೆಡೆಸಿದವರು. ಪರಂಪರೆಯ ಭಾಗವತಿಕೆಯ ಕೊನೆಯಕೊಂಡಿಯಾಗಿ ಉಳಿದಿರುವ ಅವರ ನಿದನ ಯಕ್ಷಗಾನ ರಂಗಕ್ಕೆ ತುಂಬಲಾರದ ನಷ್ಟ.
ಕುಂದಾಪುರ ತಾಲೂಕಿನ ಸಿದ್ದಾಪುರ ಸಮೀಪ ಆರ್ಗೋಡು ಎಂಬ ಕುಗ್ರಾಮದಲ್ಲಿ 1922ರಲ್ಲಿ ಗಣಪಯ್ಯ ಶೆಣೈ ಮತ್ತು ರುಕ್ಮಿಣಿ ಬಾಯಿಯವರ ಪುತ್ರನಾಗಿ ಜನಿಸಿದ ಶೆಣೈಯವರು ಐಗಳ ಮಠದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದವರು. ಶಾಲೆಗಳಿಲ್ಲದ ಆ ಕಾಲದಲ್ಲಿ ಗುರುಕುಲ ಶಿಕ್ಷಣ ಪಡೆದವರು. ಜನ್ಯಾಡಿ ಪುತ್ತು ಪೈ ಮತ್ತು ಜನಶಾಲೆ ನಾಗಪ್ಪ ಶ್ಯಾನುಬೋಗರಿಂದ ಯಕ್ಷಗಾನ ಅಬ್ಯಾಸ ಮಾಡಿ ಶ್ರೀ ಕಮಲಶಿಲೆ ಮೇಳವನ್ನು ಆ ಕಾಲದಲ್ಲಿ ತನ್ನ ಯಜಮಾನಿಕೆ ಮೂಲಕ ಹೊರಡಿಸಿದರು. ಯಕ್ಷಗಾನದ ಬಗ್ಗೆ ಕೀಳರಿಮೆ ಇದ್ದ ಆ ಕಾಲದಲ್ಲಿ ಸಮಾಜದ ಮೇಲುವರ್ಗದಿಂದ ಬಂದ ಇವರು ಯಕ್ಷಗಾನ ಕಲಾವಿದನಾಗಿ ಬೆಳೆದುಬಂದದ್ದೇ ಒಂದು ಸಾದನೆ ಎನ್ನಬಹುದು. ಸಮಾಜ ಭಾಂದವರು ಯಕ್ಷಗಾನದಿಂದ ಬಹುದೂರ ಉಳಿದಿರುವ ಆ ಕಾಲದಲ್ಲಿ ಕಾಲ್ನಡಿಗೆಯಲ್ಲೇ ಸಾಗಿ ಸಾಮಾನುಗಳನ್ನು ಎತ್ತಿನಗಾಡಿಯಲ್ಲಿ ತುಂಬಿಕೊಂಡು ಬಹುದೂರದ ಉಡುಪಿ ಉದ್ಯಾವರ ಪರಿಸರದಲ್ಲಿ ಬಡಗುತಿಟ್ಟಿನ ಕಂಪನ್ನು ಹರಡಿದ ಕೀರ್ತಿ ಇವರದ್ದಾಗಿದೆ. ಮೇಳದಲ್ಲಿ ಹಗಲು ಅಡಿಗೆ ಕೆಲಸ, ರಾತ್ರಿ ಪೂಜೆಯನ್ನೂ ಸಹ ತಾನೇ ಮಾಡಿಕೊಂಡು ಮೇಳವನ್ನು ಬಹುಕಾಲ ಮುನ್ನೆಡಿಸಿದವರು. ಕೆಲಕಾಲ ಹಿರಿಯಡ್ಕ ಮೇಳದ ಉಸ್ತುವಾರಿಯನ್ನು ವಹಿಸಿದವರು.
ಬಡಗುತಿಟ್ಟಿನ ಸಂಪ್ರದಾಯದ ಭಾಗವತನಾಗಿ ಪೆರ್ಡೂರು, ರಂಜದಕಟ್ಟೆ, ನಾಗರಕೊಡಗೆ, ಮೇಗರವಳ್ಳಿ, ಮಂದಾರ್ತಿ, ಸೌಕೂರು, ಇಡಗುಂಜಿ ಮೇಳಗಳಲ್ಲಿ ಸುಮಾರು 65 ವರ್ಷ ಕಲಾಸೇವೆಗೈದು ನಿವ್ರತ್ತಿಯಾಗಿ ನಿರಂತರ ಊರ ಹಾಗು ಪರವೂರ ಆಸಕ್ತರಿಗೆ ಶಿಕ್ಷಣ ನೀಡಿ ಯಕ್ಷಗಾನದ ಸವ್ಯಸಾಚಿಯಾಗಿ ಬೆಳೆದು ಬಂದರು. ಹಲವಾರು ವೃತ್ತಿ ಕಲಾವಿದರನ್ನು ಯಕ್ಷಗಾನ ರಂಗಕ್ಕೆ ನೀಡಿದ ಇವರ, ಪುತ್ರ, ಯಕ್ಷಗಾನದಲ್ಲಿ ಬರುವ ಶ್ರೀರಾಮನ ಪಾತ್ರಕ್ಕೆ ಹೇಳಿಮಾಡಿಸಿದ ಆಳಂಗ ಸ್ವರಬಾರವಿರುವ ಆರ್ಗೋಡು ಮೋಹನದಾಸ ಶೆಣೈ ಬಡಗುತಿಟ್ಟಿನ ಬಹುಬೇಡಿಕೆಯ ಎರಡನೇ ವೇಷಧಾರಿ. ಇವರ ಹತ್ತಿರದ ಬಂಧು ಆರ್ಗೋಡು ಸದಾನಂದ ಶೆಣೈ ಭಾಗವತರಾಗೀಯೂ, ದೇವದಾಸ ಶೆಣೈ ಮದ್ದಳೆಗಾರರಾಗಿಯೂ ವೃತ್ತಿ ಮೇಳದಲ್ಲಿ ಸೇವೆ ಸಲ್ಲಿಸುತಿದ್ದಾರೆ. ತನ್ನ ಕಲಾಸೇವೆಗಾಗಿ ಹಲವಾರು ಸನ್ಮಾನ ಪಡೆದ ಇವರಿಗೆ ಉಡುಪಿ ಯಕ್ಷಗಾನ ಕಲಾರಂಗದ ನಾರ್ಣಪ್ಪ ಉಪ್ಪೂರ ಪ್ರಶಸ್ತಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಂಗಸ್ಥಳ ಪ್ರಶಸ್ತಿಗಳು ಸಂದಿವೆ.
|
|
|